ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸುತ್ತಿರುವ ‘ಜಾನು ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿರುವ ‘ಏನ್ ಸಮಾಚಾರ ರೀ ಎಲ್ಲರೂ ಹೇಗಿದ್ದೀರಿ ಎಂಬ ಗೀತೆಯ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ವಿಶೇಷ ಸೆಟ್ನಲ್ಲಿ ಮೂಡಿ ಬಂದಿರುವ ಈ ಗೀತೆಗೆ ಮುರುಳಿ ವಿಭಿನ್ನ ಶೈಲಿಯಲ್ಲಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೃಷ್ಣರ ಛಾಯಾಗ್ರಹಣದಲ್ಲಿ ಈ ಹಾಡಿನ ಅದ್ದೂರಿತನ ಇಮ್ಮಡಿಯಾಗಿದೆ ಎಂದು ನಿರ್ದೇಶಕ ಪ್ರೀತಂ ಗುಬ್ಬಿ ತಿಳಿಸಿದ್ದಾರೆ.
ಸದ್ಯ ‘ಜಾನುಗೆ ಡಿ ಐ ಅಳವಡಿಸಲಾಗುತ್ತಿದೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ. ಈ ಹಾಡಿನ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ.
ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಪಾತ್ರದಲ್ಲಿ ಯಶ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿ ದೀಪಾಸನ್ನಿಧಿ ಹುಬ್ಬಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಸಂಗೀತಾ, ಶೋಭ್ರಾಜ್, ಸಾಧುಕೋಕಿಲಾ ಅವರ ನಟನೆ ಬಗ್ಗೆ ನಿರ್ದೇಶಕರು ಮೆಚ್ಚುಗೆ ವ್ಯಕ್ತ ಪಡೆಸಿದ್ದಾರೆ. ಸಾಧುಕೋಕಿಲಾ ಅವರ ಹಾಸ್ಯ ಸನ್ನಿವೇಶಗಳಂತೂ ನೋಡುಗರ ಮನದಲ್ಲೇ ಮನೆ ಮಾಡುವುದಂತೆ.
ನಿರ್ದೇಶಕರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಕೃಷ್ಣ ಛಾಯಾಗ್ರಾಹಕರಾಗಿರುವ ‘ಜಾನುಗೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ದೀಪು.ಎಸ್.ಕುಮಾರ್ ಸಂಕಲನ, ಇಸ್ಮಾಯಿಲ್ ಕಲಾ ನಿರ್ದೇಶನ, ಹರ್ಷ, ಮುರಳಿ, ಚಿನ್ನಿಪ್ರಕಾಶ್ ನೃತ್ಯ ನಿರ್ದೇಶನ ಹಾಗೂ ಸುರೇಶ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ಯಶ್, ದೀಪಾಸನ್ನಿಧಿ, ರಂಗಾಯಣರಘು, ಶೋಭ್ರಾಜ್, ಸಂಗೀತ, ಮಧು, ಸಾಧುಕೋಕಿಲಾ, ಲಯೇಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.